ಪಾಳುಬಿದ್ದ ಈ ದೇವಾಲಯದಲ್ಲಿದೆ ಸುಂದರವಾದ ಕೃಷ್ಣನ ವಿಗ್ರಹ, ಬೆಂಡೇಕೆರೆ Venugopala temple at Bendekere
Just Kannadiga Just Kannadiga
3.57K subscribers
46,616 views
1.1K

 Published On Apr 28, 2024

#justkannadiga #karnataka #ancient #history #tourism #hoysala #hassan #arasikere #temple #oldtemples #oldtemple


Google map location:
https://maps.app.goo.gl/2mkjp3KYqBtwM...

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬೆಂಡೇಕೆರೆ ಗ್ರಾಮದಲ್ಲಿ 12 ನೇ ಶತಮಾನದಲ್ಲಿ ಹೊಯ್ಸಳರಿಂದ ನಿರ್ಮಾಣವಾದ ರಾಮೇಶ್ವರ (ಶಾಸನೋಕ್ತ ದಾಮೋದರೇಶ್ವರ) ದೇವಾಲಯವಿದ್ದಂತೆ ಹೊಯ್ಸಳರ ಕಾಲದ್ದೇ ಆದ ವೇಣುಗೋಪಾಲ ದೇವಾಲಯವಿದೆ. ದುರದೃಷ್ಟವೆಂದರೆ ರಾಮೇಶ್ವರ ದೇವಾಲಯದಂತೆ ಇದೂ ಸಹ ಪಾಳುಬಿದ್ದು ನಿರ್ಲಕ್ಷ್ಯಕ್ಕೊಳಪಟ್ಟಿದೆ.

ಹೊಯ್ಸಳರ ಕಾಲಕ್ಕೆ ಬೆಂಡೇಕೆರೆಯು ಒಂದು ಮಹಾ ಅಗ್ರಹಾರವಾಗಿದ್ದಾಗಿ ಇಲ್ಲಿನ ಹಲವು ಶಾಸನಗಳಿಂದ ತಿಳಿದುಬರುತ್ತದೆ. 'ಜಯಗೊಂಡಪುರ' ಎಂದೇ ಪ್ರಸಿದ್ಧಿಯಾಗಿದ್ದ ಇಲ್ಲಿ ವಿಪ್ರರು, ವಿದ್ವಜ್ಜನರು, ಸಕಲ ವೇದಪಾರಂಗತರು, ಕಾವ್ಯ, ಮೀಮಾಂಸೆ, ನಾಟಕ, ಪುರಾಣ, ಸಿದ್ದಾಂತ, ಜೋತಿಷ್ಯ ಮುಂತಾದ ಹಲವು ವಿದ್ಯೆಗಳಲ್ಲಿ ಪರಿಣಿತರಾಗಿದ್ದ ಗುಣಸಂಪನ್ನರು ನೆಲೆಸಿದ್ದರು. ಅಲ್ಲದೆ ಈ ಗ್ರಾಮದ ಚೆಲುವನ್ನು ಸಹ ಇಲ್ಲಿನ ಶಾಸನಗಳಲ್ಲಿ ವರ್ಣಿಸಲಾಗಿದೆ.

ಶ್ರೀಮನ್ಮಹಾಗ್ರಹಾರವಾಗಿದ್ದ ಬೆಂಡೇಕೆರೆಯು ಈಗ ಒಂದು ಸಾಧಾರಣ ಗ್ರಾಮವಾಗಿದೆ. ತಾಲೂಕು ಕೇಂದ್ರ ಅರಸೀಕೆರೆಯಿಂದ ಐದು ಮೈಲಿ ದೂರದಲ್ಲಿ ಬಾಣಾವರ ಹೆದ್ದಾರಿಗೆ ಹೊಂದಿಕೊಂಡಂತೆ ಗ್ರಾಮವಿದೆ. ಗ್ರಾಮದ ಅಂಚಿನಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣವಾಗಿರುವ ವೇಣುಗೋಪಾಲ ದೇವಾಲಯವಿದೆ.

ದೇವಾಲಯವು ಗರ್ಭಗುಡಿ, ಶುಕನಾಸ ಮತ್ತು ನವರಂಗವನ್ನೊಳಗೊಂಡಿದೆ. ಒಂದು ಕಾಲಕ್ಕೆ ಎತ್ತರದಾದ ಜಗತಿಯ ಮೇಲೆ ನಿರ್ಮಾಣವಾದಂತೆ ತೋರುವ ವೇಣುಗೋಪಾಲ ದೇವಾಲಯ ಇಂದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.

ಹೊಯ್ಸಳ ಅರಸ ಎರಡನೇ ವೀರಬಲ್ಲಾಳನ ಆಳ್ವಿಕೆಯಲ್ಲಿ ನಿರ್ಮಾಣವಾದಂತೆ ತೋರುವ ಈ ದೇವಾಲಯದ ಹೊರಭಾಗದ ಎಲ್ಲಾ ಕಲ್ಲುಗಳು ಬಿದ್ದುಹೋಗಿವೆ. ಒಳಭಾಗದ ಒರಟು ಕಲ್ಲುಗಳಷ್ಟೇ ಈಗ ಕಾಣುತ್ತಿವೆ. ಒಳಭಾಗದಲ್ಲಿ ಸಾಧಾರಣ ಶೈಲಿಯ ನಾಲ್ಕು ಕಂಬಗಳಿವೆ. ನವರಂಗದ ಗೋಡೆಯು ಅಲ್ಲಲ್ಲಿ ಹಾನಿಯಾಗಿದೆ. ದೇವಾಲಯದ ಹಿಂಭಾಗಕ್ಕೆ ಹೆಜ್ಜೆ ಇಡಲೂ ಸಾಧ್ಯವಾಗದಂತೆ ಗಿಡಗಂಟಿಗಳು ಬೆಳೆದಿವೆ. ದೇವಾಲಯಕ್ಕೆ ಇದ್ದ ಮೂಲ ಶಿಖರವೂ ಸಹ ನಾಶವಾಗಿದೆ.

ಏಕಕೂಟ ದೇವಾಲಯವಾದ ಇಲ್ಲಿನ ಗರ್ಭಗುಡಿಯಲ್ಲಿ ಆರು ಅಡಿ ಎತ್ತರದ ಸುಂದರವಾದ ವೇಣುಗೋಪಾಲನ ಮೂರ್ತಿಯಿದೆ. ಒಂದೂವರೆ ಅಡಿ ಎತ್ತರದ ಗರುಡನ ಪೀಠದ ಮೇಲೆ ತ್ರಿಭಂಗಿಯಲ್ಲಿ ನಿಂತಿರುವ ವೇಣುಗೋಪಾಲನು ಕೊಳಲನ್ನು ನುಡಿಸುತ್ತಿದ್ದಾನೆ. ಕೊಳಲ ನಾದಕ್ಕೆ ಹಸುಕರುಗಳು, ಗೋಪಬಾಲಕರು ಮೈಮರೆತಂತೆ ಚಿತ್ರಿಸಲಾಗಿದೆ. ವೇಣುಗೋಪಾಲನ ಕಾಲಿನ ಎರಡೂ ಕಡೆ ದೇವಿಯರ ಶಿಲ್ಪಗಳಿವೆ. ಗರ್ಭಗುಡಿಯ ಪ್ರವೇಶದ್ವಾರ ಸರಳವಾಗಿದ್ದರೆ ಶುಕನಾಸಿಯ ದ್ವಾರವನ್ನು ಜಾಲಂಧ್ರದ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ನವರಂಗದ ಛಾವಣಿಯಲ್ಲಿ ಸರಳ ಶೈಲಿಯ ಪದ್ಮ ಮಂಡಲದ ವಿತಾನಗಳಿವೆ.

ದೇವಾಲಯದ ನವರಂಗದಲ್ಲಿ ಕ್ರಿ ಶ 1413 ರಲ್ಲಿ ಮಾದನಾಯಕನ ಮಗನಾದ ಸಿದ್ಧನಾಯಕನು ಪ್ರತಿಷ್ಠಾಪಿಸಿದ ಐದು ಅಡಿ ಎತ್ತರದ ನರಸಿಂಹನ ಮೂರ್ತಿಯಿದೆ. ಹಿರಣ್ಯಕಶಿಪುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆತನನ್ನು ನರಸಿಂಹನು ಸಂಹರಿಸುತ್ತಿದ್ದರೆ ಬಾಲಕ ಪ್ರಹ್ಲಾದನು ಸ್ವಾಮಿಗೆ ಕರ ಜೋಡಿಸಿ ನಮಿಸುತ್ತಿರುವಂತೆ ಕೆತ್ತಲಾಗಿದೆ. ಈ ಕೆತ್ತನೆಯ ಕೆಳಗೆ ಕೇಶವನ ಶಿಲ್ಪವನ್ನು ಸಹ ಕಾಣಬಹುದು. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಇದೊಂದು ಅಪರೂಪದ ಶಿಲ್ಪವೆಂದು ಹೇಳಬಹುದು.

ಇಷ್ಟು ಅದ್ಭುತವಾದ ಒಂದು ದೇವಾಲಯ ಕೆಲವೇ ಕಾಲದಲ್ಲಿ ನಶಿಸಿಹೋಗುವ ಅಪಾಯದಲ್ಲಿದೆ. ಮಳೆಗಾಲದಲ್ಲಿ ಛಾವಣಿಯಿಂದ ಸೋರುವ ನೀರು ದೇವಾಲಯದ ಬುನಾದಿಯನ್ನೇ ಸಡಿಲಗೊಳಿಸುತ್ತಿದೆ. ಬೆಂಡೇಕೆರೆಯ ಪಾಳುಬಿದ್ದ ರಾಮೇಶ್ವರ ಮತ್ತು ವೇಣುಗೋಪಾಲ ದೇವಾಲಯಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯವೇನಲ್ಲ. ಇಲಾಖೆಗಳು ಮನಸ್ಸು ಮಾಡಿದರೆ ಇದು ಖಂಡಿತ ಸಾಧ್ಯವಾಗುತ್ತದೆ.

show more

Share/Embed