Published On Oct 5, 2024
EX ARMY/ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ಹಾವೇರಿಯಲ್ಲಿ ಅದ್ಧೂರಿ ಸ್ವಾಗತ ಸಿಹಿ ಹಂಚಿ ಸಂಭ್ರಮ. ಭಾರತೀಯ ಸೈನ್ಯದಲ್ಲಿ 24 ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿ ಹಾವೇರಿ ತಾಲೂಕಿನ ಮೂವರು ಯೋಧರು ಬುಧವಾರ ನಿವೃತ್ತರಾಗಿದ್ದಾರೆ. ಹಾವೇರಿ ತಾಲೂಕು ಹಳೇರಿತ್ತಿ ಗ್ರಾಮದ ಶಿವಾನಂದ ತಿಮ್ಮಣ್ಣನವರ್, ಶಂಭುಲಿಂಗ ಕಲ್ಲೇದೇವರ ಮತ್ತು ಶಿರಮಾಪುರ ಗ್ರಾಮದ ಕುಮಾರ ಶಿಡಗನಾಳ ನಿವೃತ್ತರಾದ ಮೂವರು ಯೋಧರು. ದೇಶದ ಸ್ವಾತಂತ್ರಕ್ಕಾಗಿ ಜೀವನಮೀಸಲಿಟ್ಟ ಮಹಾತ್ಮಾ ಗಾಂಧಿಜಿ ಜನಿಸಿದ ದಿನವೇ ಯೋಧರು ತವರಿಗೆ ಮರಳಿದ್ದು ಹಾವೇರಿ ದೇಶಾಭಿಮಾನಿಗಳಿಗೆ ಸಂಭ್ರಮ ತಂದಿತ್ತು. ಮಹಾತ್ಮಾ ಗಾಂಧಿಜಿ ಜನ್ಮದಿನ ತವರಿಗೆ ಆಗಮಿಸಿದ ಮೂವರು ನಿವೃತ್ತ ಯೋಧರನ್ನು ಮಾಜಿ ಸೈನಿಕರ ಸಂಘ, ಯೋಧರ ಸಂಬಂಧಿಕರು ದೇಶಾಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ ಮೂವರು ನಿವೃತ್ತ ಯೋಧರನ್ನು ಪುಷ್ಪಾರ್ಪಣೆ ಮಾಡುವ ಮೂಲಕ ಸ್ವಾಗತಿಸಲಾಯಿತು. ನಂತರ ತೆರೆದ ಸಾರೋಟಾದಲ್ಲಿ ಮೂವರು ಸೈನಿಕರನ್ನು ಮೆರವಣಿಗೆ ಮಾಡಲಾಯಿತು. ರೈಲು ನಿಲ್ದಾಣದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ದೇಶಾಭಿಮಾನಿಗಳು ನಿವೃತ್ತ ಯೋಧರಿಗೆ ಕೈಕುಲುಕಿ ಶುಭಾಶಯ ಕೋರಿದರು. ಮಹಾತ್ಮಾ ಗಾಂಧಿಜಿ ವೃತ್ತಕ್ಕೆ ಆಗಮಿಸಿದಾಗ ನಿವೃತ್ತ ಯೋಧರು ವಾಹನದಿಂದ ಕೆಳಗೆ ಇಳಿದು ಮಹಾತ್ಮಾ ಗಾಂಧಿಜಿ ಪುತ್ಥಳಿಗೆ ಮಾಲಾರ್ಪಣಿ ಮಾಡಿದರು. ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಿವೃತ್ತ ಯೋಧರಿಗೆ ವಿವಿಧ ಸಂಘ ಸಂಸ್ಥೆಗಳು ಮಾಲಾರ್ಪಣೆ ಮಾಡಿ ಗೌರವಿಸಿದವು. ಪಟಾಕಿ ಸಿಡಿಸಿ ಸಿಹಿ ಹಂಚಿ ಭಾರತಮಾತೆಗೆ ಜೈಕಾರ ಹಾಕಲಾಯಿತು. ರಾಷ್ಟ್ರಧ್ವಜಗಳು ರಾರಾಜಿಸಿದವು ದೇಶಪ್ರೇಮಿ ಗೀತೆಗಳು ಗಮನಸೆಳೆದವು. ನಂತರ ಸ್ವಾತಂತ್ರ ಹೋರಾಟಗಾರ ಹೊಸಮನಿ ಸಿದ್ದಪ್ಪ ಪ್ರತಿಮೆಗೆ ನಿವೃತ್ತ ಯೋಧರು ಮಾಲಾರ್ಪಣಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಧರು ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಜನರ ಪ್ರೀತಿ ವಿಶ್ವಾಸ ಗೌರವ ನೋಡಿದರೆ ಜೀವನಪೂರ್ತಿ ಸೈನ್ಯದಲ್ಲಿರಬೇಕು ಎನಿಸುತ್ತದೆ ಎಂದು ತಿಳಿಸಿದರು. ಅದೇ ಸೈನ್ಯದ ನಿಯಮದಂತೆ ಎಷ್ಟು ವರ್ಷ ಸಾಧ್ಯವೋ ಅಷ್ಟು ವರ್ಷ ಸೇವೆ ಸಲ್ಲಿಸಿದ್ದೇವೆ. ಪ್ರತಿಯೊಬ್ಬರು ದೇಶ ಸೇವೆ ಮಾಡಬೇಕು ದೇಶದ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೇವೆ ಸಲ್ಲಿಸಿದ್ದಕ್ಕೆ ಜೀವನ ಸಾರ್ಥಕತೆ ಬಂದಿದೆ. ಪ್ರತಿಯೊಬ್ಬ ಯುವಕರು ದೇಶ ತಮಗೆ ಏನುಕೊಟ್ಟಿದೆ ಎನ್ನುವದಿಕ್ಕಿಂತ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದುಶ್ಚಟಗಳ ದಾಸರಾಗದೆ ದೇಶ ಸೇವೆಗಾಗಿ ನಡೆಯುವ ಸೇನೆಯ ನೇಮಕಾತಿ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಸೇನೆ ಸೇರಬೇಕು ಎಂದು ಮನಸ್ಸು ಮಾಡಬೇಕು ಗುರಿ ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಸೇನೆ ಸೇರಲು ಸಾಧ್ಯ ಎಂದು ನಿವೃತ್ತ ಯೋಧರು ಸಲಹೆ ನೀಡಿದರು.