Published On Premiered Sep 19, 2024
ಕರಿ ಘನ, ಅಂಕುಶ ಕಿರಿದೆನ್ನಬಹುದೆ ? - ಬಸವಣ್ಣ
ಕರಿ ಘನ: ಅಂಕುಶ ಕಿರಿದೆʼನ್ನ ಬಹುದೆ? ಬಾರದಯ್ಯಾ.
ಗಿರಿ ಘನ: ವಜ್ರ ಕಿರಿದೆʼನ್ನ ಬಹುದೆ? ಬಾರದಯ್ಯಾ.
ತಮಂಧ ಘನ: ಜ್ಯೋತಿ ಕಿರಿದೆʼನ್ನ ಬಹುದೆ? ಬಾರದಯ್ಯಾ.
ಮರಹು ಘನ: ನಿಮ್ಮ ನೆನೆವ ಮನ ಕಿರಿದೆʼನ್ನ ಬಹುದೆ?
ಬಾರದಯ್ಯಾ, ಕೂಡಲ ಸಂಗಮದೇವಾ.
ಆನೆ ದೊಡ್ಡದಾದ ಪ್ರಾಣಿ ಆದರೆ ಕಿರಿದಾದ ಅಂಕುಶದಿಂದ ಅದನ್ನು ನಿಯಂತ್ರಿಸಬಹುದು. ಬೆಟ್ಟವು ದೊಡ್ಡದು ಆದರೆ ಚೂಪಾದ ವಜ್ರದಂತಿರುವ ಆಯುಧದಿಂದ ಅದನ್ನು ಕಡಿದುಬಿಡಬಹುದು. ಘಾಡವಾದ ಕತ್ತಲು ಕವಿದಿರಬಹುದು, ಒಂದು ಸಣ್ಣ ಬೆಳಕಿನ ಕಿಂಡಿ ಕತ್ತಲನ್ನು ಹೊಡೆದೋಡಿಸಿಬಿಡುತ್ತದೆ. ಅಂದರೆ ಗಾತ್ರದಿಂದ ಯಾವುದನ್ನೂ ಅಳೆಯಬಾರದು.
ಮರೆವು ಎಂಬುದು ದೊಡ್ಡದು ಆದರೆ ಮನಸ್ಸು ಸಣ್ಣದಾದರೆ ಅದನ್ನು ನೀಗಿಸಬಲ್ಲದೇ? ಎಂದು ಪ್ರಶ್ನಿಸುತ್ತಾರೆ. ಮೇಲೆ ಹೇಳಿದ ನಿದರ್ಶನಗಳನ್ನು ತೋರಿಸಿ ಸ್ವಲ್ಪವೇ ಭಕ್ತಿ ಸಾಕು ಕೂಡಲಸಂಗಮ ದೇವನನ್ನು ಕಾಣಲು ಸಾಧ್ಯ ಎನ್ನುವುದು ತಪ್ಪು. ಕೂಡಲಸಂಗಮ ದೇವ ಎಷ್ಟು ದೊಡ್ಡವನೆಂದರೆ ಅವನ ಮುಂದೆ ನಮ್ಮ ಭಕ್ತಿ ಅಣುವಿಗಿಂತ ಸಣ್ಣದು, ಆದ್ದರಿಂದ ಸದಾ ಭಕ್ತಿ ಇದ್ದರೆ ಅದು ಅಂಕುಶದಷ್ಟು ಆಗಬಹುದೇನೋ ಎಂದು ವ್ಯಾಖ್ಯಾನಿಸುತ್ತಾರೆ ಬಸವಣ್ಣನವರು. ತಾತ್ಪರ್ಯವೇನೆಂದರೆ ನಾವು ನಿತ್ಯ ಮಾಡುವ ಸತ್ಕಾರ್ಯಗಳೂ ಭಕ್ತಿಯಿದ್ದಂತೆ, ಭಕ್ತಿ ಎನ್ನುವುದು ಮುಖ್ಯ ಅದು ನಮ್ಮಲ್ಲಿ ಸದಾ ಇರಬೇಕು.
ಭಕ್ತಿ ಎಂದರೆ ನಾವು ನಿತ್ಯ ಮಾಡುವ ಒಳ್ಳೆಯ ಕಾರ್ಯಗಳು, ನಡೆ ನುಡಿಗಳೂ ಭಕ್ತಿಯೇ. ಇಂತಹ ಭಕ್ತಿ ಜೀವನ ಪರ್ಯಂತ ಇದ್ದರೆ ಅದು ಅಂಕುಶ ಅಥವಾ ಸಣ್ಣ ಬೆಳಕಿನ ಕಿಂಡಿಯ ಸಮಾನಕ್ಕೆ ಬರಬಹುದು . ಇದರಿಂದ ನಾವು ಮುಕ್ತಿಯನ್ನು ಪಡೆಯಬಹುದು .